ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಶಿಫಾರಸು ಪತ್ರ ನೀಡಿ, ದಲಿತ ಗುತ್ತಿಗೆದಾರರನ್ನು ಕಿತ್ತು ಹಾಕಿಸಿದ ಹೆಚ್.ಎಂ. ರೇವಣ್ಣ ಅವರನ್ನು ವಜಾ ಗೊಳಿಸಿ-ಎಂ ಗುರುಮೂರ್ತಿ
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಬಿಬಿಎಂಪಿ ವಲಯದಲ್ಲಿ ಅರ್ಹತೆ ಇದ್ದು, ನಿಯಮಾನುಸಾರ ಗುತ್ತಿಗೆ ಪಡೆದು ಕೆಲಸದಲ್ಲಿ ಅಧಿಕಾರಿಗಳಿಂದ ಪ್ರಶಂಸನಾ ಪತ್ರ ಪಡೆದಿರುವ ದಲಿತ ಗುತ್ತಿಗೆದಾರರನ್ನು ಬದಲಿಸಿ ಅರ್ಹತೆ ಮತ್ತು ಅನುಭವವಿಲ್ಲದ ನಿಯಮಾವಳಿ ಅನುಸರಿಸದೇ ತನ್ನ ಹಿಂಬಾಲಕರಿಗೆ ಗುತ್ತಿಗೆ ನೀಡಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ತರಲು ಪತ್ರ ನೀಡಿರುವ ವಿಧಾನ ಪರಿಷತ್ ಸದಸ್ಯ ಹೆಚ್.ಎಂ. ರೇವಣ್ಣ ಅವರನ್ನು ಸದಸ್ಯತ್ವದಿಂದ ವಜಾ ಗೊಳಿಸಬೇಕು' ಎಂದು ಶೋಷಿತರ ಸಂರಕ್ಷಣಾ ವೇದಿಕೆ ಮತ್ತು ದಲಿತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಲ್ಲಸಂದ್ರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
' ಸಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವಾಗ ತನ್ನ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ಅರ್ಹತೆ ಇಲ್ಲದವರಿಗೆ ಶಿಫಾರಸು ಪತ್ರಗಳನ್ನು ನೀಡಿರುವುದು ಕೆ.ಎಂ.ಸಿ ಕಾಯ್ದೆಯನ್ನು ಉಲ್ಲಂಘಿಸಿ ದಲಿತರು ನಡೆಸುತ್ತಿರುವ ಗುತ್ತಿಗೆಯನ್ನು ಬೇರೆಯವರಿಗೆ ನೀಡಿ ದಲಿತರು ತಿನ್ನುವ ಅನ್ನದ ಮೇಲೆ ಕಲ್ಲು ಹಾಕುವ ಕೆಲಸ ಮಾಡುತ್ತಿರುವುದನ್ನು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಖಂಡಿಸುತ್ತದೆ' ಎಂದು ಬಹು ಜನ ಸಮಾಜ ಪಾರ್ಟಿಯ ಮುಖಂಡ ಎಂ. ಗುರುಮೂರ್ತಿ ಆಗ್ರಹಿಸಿದರು.
' ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನೀಡಿದ ಹಕ್ಕು, ಅಧಿಕಾರಿಗಳಿಂದ ದಲಿತರು ಅಲ್ಪಸ್ವಲ್ಪ ವ್ಯಾಪಾರ, ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಅಧಿಕಾರ ಗಳಿಸಿ ತಮ್ಮ ಮೊದಲಿನ ಸ್ಥಿತಿಗಿಂತ ಸ್ವಲ್ಪಮಟ್ಟಿಗೆ ಸುಧಾರಿಸಿದ್ದಾರೆ. ದೇಶದ ಅಧಿಕಾರವನ್ನು ಅನುಭವಿಸಿದ ಕಾಂಗ್ರೆಸ್ ಇಂದಿಗೂ ದಲಿತ ವಿರೋಧಿ ಹೊಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ' ಎಂದು ಕರ್ನಾಟಕ ಬಹುಜನ ಚಳುವಳಿ ರಾಜ್ಯಾಧ್ಯಕ್ಷ ಕನಕೇನಹಳ್ಳಿ ಕೃಷ್ಣಪ್ಪ ಕಿಡಿಕಾರಿದರು.
' ಹೆಚ್ ಎಂ. ರೇವಣ್ಣ ದಲಿತ ಗುತ್ತಿಗೆದಾರರನ್ನು ಕಿತ್ತು ಹಾಕಲು ಶಿಫಾರಸು ಪತ್ರ ನೀಡಿದ್ದಾರೆ. ಅವರು ಕೂಡಲೇ ಕ್ಷಮೆಯಾಚಿಸಿ ಮೊದಲಿನಂತೆ ದಲಿತ ಗುತ್ತಿಗೆದಾರರಿಗೆ ನ್ಯಾಯ ಸಿಗಬೇಕು. ಇಲ್ಲವಾದರೆ ಅವರ ಮನೆಯ ಮುಂದೆ ಪ್ರತಿಭಟನೆ ಮಾಡುತ್ತೇವೆ ಮತ್ತು ಅವರ ಸದಸ್ಯತ್ವ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ ಪತ್ರ ನೀಡುತ್ತೇವೆ' ಎಂದು ದಲಿತ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಬಹುಜನ ಚಳುವಳಿ ರಾಜ್ಯ ಸಂಘಟನಾ ಸಂಚಾಲಕ ಎಂ.ವೆಂಕಟೇಶ್, ಶೋಷಿತರ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕಾಂತ್ ಡಿ.ಜೆ, ಶೋಷಿತರ ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಸಿ.ಆರ್.ರಾಜು, ದಲಿತ ಬಹುಜನ ಚಳುವಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ, ರಾಜ್ಯ ಸಂಘಟನಾ ಸಂಚಾಲಕ ಎನ್. ಮುನಿರಾಜು,ಅಂಬೇಡ್ಕರ್ ಸೇನೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಗಿರೀಶ್, ದಲಿತ ಸಂರಕ್ಷಣಾ ಸಮಿತಿ ಯುವ ಅಧ್ಯಕ್ಷ ಕೃಷ್ಣಮೂರ್ತಿ(ಕಿಟ್ಟಿ), ಕರ್ನಾಟಕ ದಲಿತ ಅಂಬೇಡ್ಕರ್ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೇಶವಮೂರ್ತಿ, ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಎನ್. ನಾಗರಾಜು, ದಲಿತ ಮುಖಂಡ ಮಧುರೆ,ರಾಮು ಮುಂತಾದವರು ಭಾಗವಹಿಸಿದ್ದರು.